Monday 25 September 2017

24/09/2017 ರ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ನನ್ನ ಲೇಖನ "ತಪ್ಪಿಲ್ಲದದ್ದರೂ ವಿಚ್ಛೇದಿತರಾಗುವುದು"


ಮದುವೆಯೆಂದರೆ ಅದೊಂದು ಪವಿತ್ರ ಬಂಧ ಏಳೇಳು ಜನ್ಮದ ಅನುಬಂಧ. ಸುಸಂಸ್ಕೃತ ನಾಡಾದ ನಮ್ಮ ಭಾರತ ದೇಶದಲ್ಲಿ ಮದುವೆಗೆ ವಿಶಿಷ್ಟವಾದ ಸ್ಥಾನ ಮಾನವಿದೆ. ನಮ್ಮೆಲ್ಲರ ಜೀವನದಲ್ಲಿ ಮದುವೆಯೆಂಬುದು ಒಂದು ಮಹತ್ತರವಾದ ಘಟ್ಟ, ಅಪ್ಪ ಅಮ್ಮಂದಿರಿಗಂತು ಮಕ್ಕಳ ಮದುವೆ ಮಾಡುವುದು ಅವರ ಜೀವಮಾನದ ಸಾಧನೆಗಳಲ್ಲೊಂದು.  
ಇತ್ತೀಚಿನ ದಿನಗಳಲ್ಲಿ ಬಹುತೇಕ ಮದುವೆಗಳು ಬಹುಬೇಗ ಕಳಚಿಬಿದ್ದು ದಂಪತಿಗಳು ಡೈವರ್ಸ ಪಡೆದು ದೂರಾಗುತ್ತಿದ್ದಾರೆ. 
ಈ ಡೈವರ್ಸ ಎಂಬ ಮಹಾಮಾರಿಯು ಪಾಶ್ಚಾತ್ಯ ದೇಶಗಳಲ್ಲಿ ಸಾಮಾನ್ಯವಾಗಿದೆ ಆದರೆ ಸುಸಂಸ್ಕೃತಿಗೆ ಹೆಸರಾದ ಗಂಡನನ್ನು ದೇವರೆಂದು ಪೂಜಿಸುವ ನಮ್ಮ ಭಾರತದಲ್ಲಿಯೂ ಹೆಚ್ಚಾಗಿರುವುದು ಶೋಚನೀಯ ಸಂಗತಿ. ಒಂದು ಅಂಕಿಅಂಶದ ಪ್ರಕಾರ ಇಡೀ ನಮ್ಮ ದೇಶದಲ್ಲಿ ಡೈವರ್ಸ ತೆಗೆದುಕೊಳ್ಳುವುದರಲ್ಲಿ ನಮ್ಮ ಕರ್ನಾಟಕವು 4ನೇ ಸ್ಥಾನದಲ್ಲಿದೆ ಕೇರಳ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. 
ಬದಲಾದ ಜೀವನ ಶೈಲಿ ಮತ್ತು ಹೊಂದಾಣಿಕೆಯ ಕೊರತೆಯಿಂದ ಹಲವರು ಡೈವರ್ಸ ಪಡೆದರೆ ಇನ್ನೂ ಕೆಲವರು ಮಾಡದ ತಪ್ಪಿಗೆ ಡೈವರ್ಸ ಪಡೆದು ವಿಚ್ಚೇದಿತರು ಎಂದೆನಿಸಿಕೊಳ್ಳುತ್ತಿದ್ದಾರೆ 
ಒಂದು ಹುಡುಗ ಅಥವಾ ಹುಡುಗಿ ತಾವು ಪ್ರೀತಿಸಿದವರ ವಿಷಯವನ್ನು ಪೋಷಕರ ಮುಂದೆ ಪ್ರಸ್ತಾಪಿಸದೆ ಅವರು ಹೇಳುವವರನ್ನು ಮದುವೆಯಾಗಿ ಮದುವೆಯ ನಂತರ ತನ್ನ ಸಂಗಾತಿಯಿಂದ ವಿಚ್ಛೇದನ ಪಡೆದು ಪ್ರೀತಿಸಿದವರನ್ನು ಮದುವೆಯಾದ ಪ್ರಸಂಗಗಳು ಬೇಕಾದಷ್ಟಿವೆ ಇನ್ನೂ ಕೆಲವರು ಪೋಷಕರ ಬಲವಂತಕ್ಕೆ ಅವರು ತೋರಿಸಿದವರ ಜೊತೆ ಒಪ್ಪಿಗೆ ಸೂಚಿಸಿ ಮದುವೆಗೆ ಮುನ್ನಾದಿನ ಮದುವೆ ಮನೆಯಿಂದ ಪ್ರೀತಿಸಿದವರ ಜೊತೆ ಓಡಿ ಹೋದ ಪ್ರಸಂಗಗಳೂ ಇವೆ. 
ನನಗೆ ಗೊತ್ತಿರುವ ಗೆಳತಿಯೊಬ್ಬಳಿಗೆ ಮದುವೆಯಾಯಿತು ಅವಳ ಪತಿರಾಯ ಅವರ ಪ್ರೀತಿ ವಿಚಾರವನ್ನು ಅವನ ಪೋಷಕರಿಗೆ ಹೇಳಲು ಹೆದರಿ ಇವಳನ್ನು ಮದುವೆಯಾಗಿದ್ದನು. ಮದುವೆಯಾದ ಸ್ವಲ್ಪ ದಿನದಲ್ಲೇ ನನ್ನ ಸ್ನೇಹಿತೆಗೆ ಡೈವರ್ಸ ಕೊಟ್ಟು ಅವನ ಪ್ರಿಯತಮೆಯನ್ನು ಮದುವೆಯಾದನು.  ಅವನು ಅವನ ಪ್ರೀತಿ ವಿಚಾರವನ್ನು ಹೇಳಿ ಅಥವಾ ಅವನಿಗೆ ಈ ಮದುವೆ ಇಷ್ಟವಿಲ್ಲ ಎಂದು ಅವನ ಪೋಷಕರಿಗೆ ಹೇಳಿಬಿಡಬಹುದಿತ್ತು ಆದರೆ ಅನ್ಯಾಯವಾಗಿ ಏನು ತಪ್ಪು ಮಾಡದ ಒಂದು ಹೆಣ್ಣಿಗೆ ಡೈವರ್ಸ ಕೊಟ್ಟು ವಿಚ್ಛೇದಿತೆ ಎಂಬ ಪಟ್ಟಕಟ್ಟಿದ. 
ನಮಗೆ ಗೊತ್ತಿರುವ ಬಳಗದಲ್ಲಿ ಹುಡುಗಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿರುವ ವಿಚಾರ ಅವಳ ಅಪ್ಪನಿಗೆ ತಿಳಿದು ಅವಳನ್ನು ಗದರಿಸಿ ಮನೆಯಲ್ಲಿರಿಸಿ ಅವಳಿಗೆ ಮದುವೆ ಗೊತ್ತುಮಾಡಿದರು ಆ ಹುಡುಗಿಯು ಅವರಪ್ಪನ ಮೇಲೆ ಸೇಡುತೀರಿಸಿಕೊಳ್ಳಲು ಮದುವೆಗೆ ಒಪ್ಪಿಗೆ ಸೂಚಿಸಿ ಆರತಕ್ಷತೆಯ ದಿನ ಪ್ರೀತಿಸಿದ ಹುಡುಗನೊಂದಿಗೆ ಓಡಿ ಹೋದಳು.  ಈ ಪ್ರಕರಣದಲ್ಲಿ ಮದುವೆಯಾಗ ಬಂದ ಹುಡುಗ ಮತ್ತು ಅವನ ಪೋಷಕರು ಮದುವೆ ರದ್ದಾದ ಕಾರಣ ಬಂಧು ಬಾಂಧವರು ಮತ್ತು ಸ್ನೇಹಿತರ ಮುಂದೆ ಬಾರಿ ಮುಜುಗರವನ್ನು ಅನುಭವಿಸಬೇಕಾಯಿತು 
ಇಲ್ಲಿ ನಾವು ಗಮನಿಸಬೇಕಾದದ್ದು ಎರಡು ಅಂಶಗಳು ಮೊದಲನೆಯದಾಗಿ ತಮ್ಮ ಪ್ರೀತಿಯ ವಿಚಾರ ಹೇಳಲಾಗದೆ ಇರುವುದು ಅಥವಾ ತಮ್ಮ ಪ್ರೀತಿಗಾದ ಅವಮಾನಕ್ಕೆ ಪೋಷಕರ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಿಂತ ತಮ್ಮನ್ನು ಮದುವೆಯಾದ ಅಥವಾ ಮದುವೆಯಾಗ ಬಂದವರ ಜೀವನದ ಪ್ರಶ್ನೆ 
ಎರಡನೆಯದಾಗಿ ಮದುವೆಯೆಂದರೆ ಹುಡುಗಾಟವಲ್ಲ ಅದು ಹೆಣ್ಣು ಹೆತ್ತವರಂತೂ ಜೀವನವಿಡೀ ಕಷ್ಟಪಟ್ಟು ದುಡಿದು ಕೂಡಿಟ್ಟ ಹಣದ ಜೊತೆಗೆ ಸಾಲವನ್ನು ಮಾಡಿ ಮಗಳ ಮದುವೆಗೆಂದು ಸುರಿಯುತ್ತಾರೆ ಇಂತಹ ಸಂದರ್ಭದಲ್ಲಿ ಮದುವೆ ಮುರಿದು ಬಿದ್ದರೆ ಆ ಹಿರಿಯ ಜೀವಗಳಿಗೆ ಆಗುವ ನೋವು ಸಂಕಟ ಮತ್ತು ಅವಮಾನದ ಬಗ್ಗೆ ಒಮ್ಮೆ ಯೋಚಿಸಿ ನೋಡಿ. 
ಪೋಷಕರು ನಿರ್ಧರಿಸಿದ ಸಂಬಂಧ ಇಷ್ಟವಿಲ್ಲದಿದ್ದರೆ ನೇರವಾಗಿ ಹೇಳಿಬಿಡಿ ಒಂದು ದೊಡ್ಡ ದುರಂತ ಮಾಡಿ ಪೋಷಕರನ್ನು ನೋಯಿಸುವುದರ ಮುಂದೆ ಚಿಕ್ಕ ಮಾತಿನಲ್ಲಿ ಪುಟ್ಟದಾಗಿ ಕೊಡುವ ನೋವು ಎನೇನೂ ಅಲ್ಲ.  ಈ ಜಗತ್ತಿನಲ್ಲಿ ಬೇರೆಯವರ ಜೀವನದಲ್ಲಿ ಆಟವಾಡಲು ಯಾರಿಗೂ ಹಕ್ಕಿಲ್ಲ,  ಯಾರು ಆಟವಾಡಬಾರದೂ ಕೂಡ ಬೇರೆಯವರ ಭವಿಷ್ಯ ಕೂಡ ನಮ್ಮ ಭವಿಷ್ಯದಂತೆಯೇ. 
ಪೋಷಕರು ಕೂಡ ಮದುವೆಯಂತಹ ಬಹುದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮಕ್ಕಳ ಇಷ್ಟ ಕಷ್ಟಗಳನ್ನು ಕೇಳಿ ಸಂಬಂಧವನ್ನು ಗೊತ್ತುಮಾಡುವುದು ಉತ್ತಮವೆನಿಸುತ್ತದೆ. ತಾಳ್ಮೆಯಿಂದ ಆಲೋಚಿಸಿ ಮದುವೆ ನಿರ್ಧಾರ ತೆಗೆದುಕೊಂಡಲ್ಲಿ ಎಷ್ಟೋ ಹುಡುಗ ಹುಡುಗಿಯರು ತಮ್ಮ ತಪ್ಪಿಲ್ಲದೇ ವಿಚ್ಛೇದಿತರಾಗುವುದನ್ನು ತಪ್ಪಿಸಬಹುದು 
                                              - - ಕವಿತಾ ಗೋಪಿಕುಂಟೆ 

No comments:

Post a Comment

Note: only a member of this blog may post a comment.