Sunday 31 December 2017

31/12/2017 ರ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ನನ್ನ ಲೇಖನ "ಹೊಸವರ್ಷದ ನಿರ್ಣಯಗಳು"

http://prajapragathi.epapertoday.com/?yr=2017&mth=12&d=31&pg=7


ಜನವರಿ ಒಂದನೇ ತಾರೀಖು ನಮ್ಮ ಹೊಸ ವರ್ಷವಲ್ಲ ಆದರೂ ಎಲ್ಲರಂತೆ ಕ್ಯಾಲೆಂಡರ್ ಹೊಸ ವರ್ಷವನ್ನು ಕೇಕ್ ಕತ್ತರಿಸಿ ಸ್ವಾಗತಿಸುವುದಷ್ಟೇ ಅಲ್ಲ, ನಮ್ಮ ಏಳಿಗೆಗಾಗಿ ಹೊಸ ನಿರ್ಧಾರಗಳೊಂದಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದರ ಮೂಲಕ ಸ್ವಾಗತಿಸುವುದು ಬಹಳ ಮುಖ್ಯ. ಹೊಸ ವರ್ಷದ ದಿನದಂದು ಹೊಸ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವುದು ಪಾಶ್ಚಿಮಾತ್ಯರ ಸಂಸ್ಕೃತಿ, ಯಾವ ಸಂಸ್ಕೃತಿಯಾದರೇನು ಒಂದು ಒಳ್ಳೆಯ ಬೆಳವಣಿಗೆ, ನಮ್ಮ ಏಳಿಗೆಗೆ ಸಹಕಾರಿಯಾಗುವುದಾದರೆ ಅದನ್ನು ಅನುಸರಿಸುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಭಾವನೆ.
ಹೊಸ ವರ್ಷ ಆರಂಭವಾಗುವುದಕ್ಕಿಂತ ಮುಂಚೆ, ಕಳೆದ ವರ್ಷ ತೆಗೆದುಕೊಂಡ ನಿರ್ಣಯಗಳು, ಮಾಡಿ ಮುಗಿಸಿದ ಕೆಲಸಗಳು ಮತ್ತೆ ಇನ್ನು ಮುಗಿದಿರದ ಕೆಲಸಗಳನ್ನು ಪಟ್ಟಿ ಮಾಡಿಕೊಳ್ಳಬೇಕು. ಮುಗಿದ ಕೆಲಸಗಳನ್ನು ಮಾಡುವಾಗ ಎದುರಾದ ತೊಂದರೆಗಳು, ನಾವು ಮಾಡಿದ ಸರಿ ತಪ್ಪುಗಳನ್ನು ಪಟ್ಟಿ ಮಾಡಿ ವಿಮರ್ಶೆ ಮಾಡಿಕೊಳ್ಳುಬೇಕು, ಇನ್ನೂ ಮುಗಿಯದೆ ಇರುವ ಕೆಲಸಗಳು ಯಾವ ಕಾರಣಕ್ಕೆ ಬಾಕಿ ಇವೆ ಎಂದು ಕಾರಣವನ್ನು ಹುಡುಕಿ, ಬಾಕಿ ಇರುವ ಕೆಲಸಗಳನ್ನು ಮುಂದಿನ ವರ್ಷದ ನಿರ್ಣಯಗಳ ಪಟ್ಟಿಗೆ ಸೇರಿಸಿಕೊಳ್ಳಬೇಕು.
ಹೊಸ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವುದರಿಂದ ನಮ್ಮಲ್ಲಿರುವ ಶಕ್ತಿ ಸಾಮರ್ಥ್ಯ ತಿಳಿಯುತ್ತದೆ, ಜೀವನದ ಬಗ್ಗೆ ಹೆಮ್ಮೆ ಎನಿಸಿ ಮುಂದಿನ ದಿನಗಳ ಬಗ್ಗೆ ಉತ್ಸಾಹ ಬರುತ್ತದೆ, ಹೊಸ ಹೊಸ ಸಾಧನೆಗಳ ಬಗ್ಗೆ ಅರಿವಾಗಿ ಸಾಧಿಸಬೇಕೆಂಬ ಆಸೆಯುಂಟಾಗುತ್ತದೆ.
ನಿರ್ಣಯಗಳನ್ನು ತೆಗೆದುಕೊಳ್ಳುವುದು ಅಷ್ಟೇ ಅಲ್ಲ ನಾವು  ತೆಗೆದುಕೊಂಡ ನಿರ್ಣಯಗಳು ಸರಿಯಾಗಿವೆಯೇ ಎಂದೊಮ್ಮೆ ಯೋಚಿಸುವುದು ಅತ್ಯಗತ್ಯ ಏಕೆಂದರೆ ಒಬ್ಬ ಮನುಷ್ಯ ಜೀವನದಲ್ಲಿ ಎಲ್ಲವನ್ನು ಸಾಧಿಸಲು ಸಾಧ್ಯವಿಲ್ಲ, ನಮ್ಮ ಇತಿಮಿತಿಯ  ಒಳಗೆ ನಮ್ಮ ಅಗತ್ಯತೆಗೆ ತಕ್ಕಂತೆ ನಿರ್ಣಯಗಳನ್ನು ತೆಗೆದುಕೊಳ್ಳಬೇಕು, ತೆಗೆದುಕೊಂಡ ಎಲ್ಲಾ ನಿರ್ಣಯಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಬೇಕು.
ನಮ್ಮ ನಿರ್ಣಯಗಳ ಪಟ್ಟಿ ತಯಾರಾದಾಗ, ಅವುಗಳಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿಯಲ್ಲಿ ಮಾಡಬಹುದಾದ ನಿರ್ಣಯಗಳನ್ನಾಗಿ ವಿಂಗಡಿಸಿಕೊಳ್ಳಿ. ಅವುಗಳನ್ನು ಸಾಧನೆ ಮಾಡಲು ಬೇಕಾದ ಪೂರ್ವತಯಾರಿಗೆ ಮತ್ತು ಸಾಧಿಸುವುದಕ್ಕೆ ಎಷ್ಟು ಸಮಯ ಬೇಕಾಗಬಹುದು ಎಂದು ಯೋಚಿಸಿ ವೇಳಾಪಟ್ಟಿ ಹಾಕಿಕೊಳ್ಳುವುದು ಉತ್ತಮ.
ಪೂರ್ವತಯಾರಿ ಇಲ್ಲದೆ, ಸರಿಯಾಗಿ ಪ್ಲಾನ್ ಮಾಡಿಕೊಳ್ಳದೆ ಯಾವ ಕೆಲಸವನ್ನು ಮಾಡಬಾರದು. ನಾವು ಇಲ್ಲಿ ಯಾರಿಗಾಗಿಯೂ ಸಾಧಿಸಿ ತೋರಿಸಬೇಕಾಗಿಲ್ಲ ನಮಗಾಗಿ ನಮ್ಮ ಆತ್ಮ ಸಂತೋಷಕ್ಕಾಗಿ ಸಾಧಿಸಬೇಕಾಗಿರುವುದರಿಂದ ಆತುರ ಪಡದೆ ನಿಧಾನವಾಗಿ ಆಲೋಚಿಸಿ ಕೆಲಸಗಳನ್ನು ಆರಂಭಿಸಬೇಕು. ಮಾರ್ಗದರ್ಶನ ಬೇಕಿದ್ದಲ್ಲಿ ಸರಿಯಾದ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆದು, ನನಗೆ ಆಗುವುದಿಲ್ಲ ಎನ್ನುವ ಹುಳವನ್ನು ತಲೆಯಿಂದ ತೆಗೆದು ಹಾಕಿ ಶ್ರಮವಹಿಸಿ ಮಾಡಿದ್ದಲ್ಲಿ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಒಂದು ವೇಳೆ ಸಮಯದ ಅಭಾವ ಅನಾರೋಗ್ಯ ಮತ್ತಿತರ ಕಾರಣಗಳಿಂದ ನಾವು ತೆಗೆದುಕೊಂಡ ನಿರ್ಣಯಗಳನ್ನು ವರ್ಷಾಂತ್ಯದ ಒಳಗೆ ಮುಗಿಸಲಾಗದಿದ್ದರೆ ಕೊರಗುವುದು ಬೇಡ. ಮುಗಿಯದೆ ಉಳಿದ ಕೆಲಸಗಳನ್ನು, ಮಾಡಲೇಬೇಕಾದ ಕೆಲಸಗಳನ್ನು ಮುಂದಿನ ವರ್ಷದ ಪಟ್ಟಿಗೆ ಸೇರಿಸಿಕೊಂಡರೆ ಆಯಿತು. ಒಟ್ಟಿನಲ್ಲಿ ವರ್ಷದಿಂದ ವರ್ಷಕ್ಕೆ ನಮ್ಮ ಸಾಧನೆಗಳ ಪಟ್ಟಿಬೆಳೆದು ನಮ್ಮ ಏಳಿಗೆಯಾಗುವುದಷ್ಟೇ ಮುಖ್ಯ.  

No comments:

Post a Comment

Note: only a member of this blog may post a comment.